ಡಿ. ವೇದವ್ಯಾಸ್ ಕಾಮತ್ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ಭಾರತೀಯ ರಾಜಕಾರಣಿ. ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. == ವೈಯಕ್ತಿಕ ಜೀವನ == ವೇದವ್ಯಾಸ್ ಕಾಮತ್ ಅವರು ಡಿಸೆಂಬರ್ 7, 1977 ರಂದು ಕುಂದಾಪುರದಲ್ಲಿ ಡಿ.ವಾಮನ್ ಕಾಮತ್ ಮತ್ತು ತಾರಾ ವಿ.ಕಾಮತ್ ದಂಪತಿಗೆ ಜನಿಸಿದರು. ಅವರಿಗೆ ಮೂವರು ಒಡಹುಟ್ಟಿದವರಿದ್ದಾರೆ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಂಗಳೂರಿನ ಕೆನರಾ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಬಿಕಾಂ ಶಿಕ್ಷಣ ಪಡೆದರು. ವೇದವ್ಯಾಸ್ ಕಾಮತ್ ಅವರು ತಮ್ಮ ಬಾಲ್ಯದಲ್ಲಿ ಸ್ವಯಂಸೇವಕರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು. ವೃಂದಾ ಕಾಮತ್ ಅವರನ್ನು ವಿವಾಹವಾಗಿರುವ ಇವರಿಗೆ, ಇಬ್ಬರು ಗಂಡು ಮಕ್ಕಳಿದ್ದಾರೆ. == ರಾಜಕೀಯ ಜೀವನ == ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದ ವೇದವ್ಯಾಸ್ ಕಾಮತ್ ಅವರು, ಮುಂದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾದರು. ಅವರು ಮಂಗಳೂರು ದಕ್ಷಿಣ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. 2018ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸಿದ ಅವರು, 86,545 ಮತಗಳಿಂದ ಮಾಜಿ ಶಾಸಕ ಜೆ. ಆರ್.ಲೋಬೋ ವಿರುದ್ಧ ಜಯಗಳಿಸಿದರು. 2023ರ ಚುನಾವಣೆಯಲ್ಲೂ ಅದೇ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದ ಅವರು, ಸತತ ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾದರು. ಶಾಸಕರಾಗಿ, ವೋಕಲ್ ಫಾರ್ ಲೋಕಲ್, ನೋ ಹಾರ್ನ್ ವೆನಸ್ಡೇ, ಪ್ಲಾಸ್ಟಿಕ್ ಫ್ರೀ ಕುಡ್ಲ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. == ಸಾಮಾಜಿಕ ಸೇವೆ == 2002 ರಲ್ಲಿ ಬಡವರು ಮತ್ತು ಅಸಹಾಯಕರ ಸೇವೆಗಾಗಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅನ್ನು ಅವರು ಸ್ಥಾಪಿಸಿದರು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ವೃದ್ಧರಿಗೆ ಮತ್ತು ಬಡವರಿಗೆ ಆಸ್ಪತ್ರೆ ವೆಚ್ಚಗಳನ್ನು ಈ ಟ್ರಸ್ಟ್ ಒದಗಿಸುತ್ತದೆ. ವರ್ಷಂಪ್ರತಿ ಹಲವಾರು ಬಾರಿ ರಕ್ತದಾನ ಶಿಬಿರಗಳನ್ನೂ ನಡೆಸಲಾಗುತ್ತದೆ. ಈ ಟ್ರಸ್ಟ್, ಮೂಡುಬಿದಿರೆಯ ಕಡಲಕೆರೆ ಸರಕಾರಿ ಶಾಲೆಯನ್ನು ದತ್ತು ಪಡೆದಿದ್ದು, 150ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪದವಿನಂಗಡಿ ಗಣೇಶೋತ್ಸವ, ಭಟ್ಕಳ ಗಣಪತಿ ದೇವಸ್ಥಾನ, ಕಾರ್ ಸ್ಟ್ರೀಟ್ ವೆಂಕಟ್ರಮಣ ದೇವಸ್ಥಾನ ಇತ್ಯಾದಿ ದೇಗುಲಗಳಲ್ಲೂ ಗುರುತಿಸಿಕೊಂಡಿರುವ ಇವರು, ಇವರು ಮಂಗಳೂರಿನ ಭುವನೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ ಆಗಿದ್ದಾರೆ. ದಿಗಂತ ಮುದ್ರಣಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. == ಉಲ್ಲೇಖಗಳು ==